Home » ರಾಜ್ಯ » ಕೋಗಿಲು ಲೇಔಟ್ ಅಕ್ರಮ ಶೆಡ್ ತೆರವು ಪ್ರಕರಣಅರ್ಹ ಸಂತ್ರಸ್ತರಿಗೆ ಸುಸಜ್ಜಿತ ಮನೆ: ಸಿಎಂ ಸಿದ್ದರಾಮಯ್ಯ ಭರವಸೆ2 ದಿನಗಳಲ್ಲಿ ಅರ್ಹರ ಗುರುತು – ಜ.1ರಂದು ಮನೆ ಹಂಚಿಕೆ ಸಾಧ್ಯತೆ

ಕೋಗಿಲು ಲೇಔಟ್ ಅಕ್ರಮ ಶೆಡ್ ತೆರವು ಪ್ರಕರಣಅರ್ಹ ಸಂತ್ರಸ್ತರಿಗೆ ಸುಸಜ್ಜಿತ ಮನೆ: ಸಿಎಂ ಸಿದ್ದರಾಮಯ್ಯ ಭರವಸೆ2 ದಿನಗಳಲ್ಲಿ ಅರ್ಹರ ಗುರುತು – ಜ.1ರಂದು ಮನೆ ಹಂಚಿಕೆ ಸಾಧ್ಯತೆ

ಬೆಂಗಳೂರು :ಯಲಹಂಕ ಸಮೀಪದ ಕೋಗಿಲು ಲೇಔಟ್‌ನ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ರಾಜಕೀಯ ಸ್ವರೂಪ ಪಡೆದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾನವೀಯ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದೆ.
ಮಂಗಳವಾರ ಹಾಗೂ ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಬಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅರ್ಹ ಸಂತ್ರಸ್ತರನ್ನು ಗುರುತಿಸಲಿದ್ದು, ಹೊಸ ವರ್ಷದ ಮೊದಲ ದಿನವಾದ ಜ.1ರಂದು ಮನೆ ಹಂಚಿಕೆ ಮಾಡುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಮುಖ್ಯಮಂತ್ರಿ ವಹಿಸಿದ್ದಾರೆ.
ಕೋಗಿಲು ಲೇಔಟ್‌ನಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿರುವ ಬೈಯ್ಯಪ್ಪನಹಳ್ಳಿಯ ‘ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ’ಯಡಿ ಒಂದು ಪ್ರಕರಣಕ್ಕೆ ಸೀಮಿತವಾಗಿ ವಸತಿ ಹಂಚಿಕೆ ಮಾಡಲು ಸರಕಾರ ನಿರ್ಧರಿಸಿದೆ.
ಅಕ್ರಮಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಅಕ್ರಮ ಶೆಡ್‌ಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದ ಕಂದಾಯ ಇಲಾಖೆ ಹಾಗೂ ಜಿಬಿಎ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಿಯೂ ಸರಕಾರಿ ಭೂಮಿ ಒತ್ತುವರಿ ಆಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.
ಈ ಸಂಬಂಧ ಸೋಮವಾರ ಡಿಸಿಎಂ ಸೇರಿದಂತೆ ಪ್ರಮುಖರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಸಿಎಂ,
ಕಸ ವಿಲೇವಾರಿ ಉದ್ದೇಶಕ್ಕೆ 15 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳು ಜಿಬಿಎಗೆ ಹಸ್ತಾಂತರಿಸಿದ್ದರು. ಆ ಜಾಗದಲ್ಲಿ ಬಂಡೆ ಕ್ವಾರಿಯೂ ಇದೆ. 2020-21ರಿಂದ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿ ಜನ ನೆಲೆಸಿದ್ದರು. ತಹಸೀಲ್ದಾರ್‌, ಶಿರಸ್ತೇದಾರರಿಗೆ ತಿಳಿಯದೇ ಇಂತಹ ಒತ್ತುವರಿ ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ”
ಎಂದು ಸ್ಪಷ್ಟಪಡಿಸಿದರು.
2 ದಿನಗಳಲ್ಲಿ ಅರ್ಹರ ಪಟ್ಟಿ
ಅಕ್ರಮ ಶೆಡ್‌ಗಳಲ್ಲಿ ವಾಸವಾಗಿದ್ದವರ ಪೈಕಿ ಅರ್ಹರನ್ನು ಮುಂದಿನ ಎರಡು ದಿನಗಳಲ್ಲಿ ಗುರುತಿಸಿ ಪಟ್ಟಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಬಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ.
“ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರಕಾರ ನಿರ್ಧರಿಸಿದೆ”
ಎಂದು ಸಿಎಂ ತಿಳಿಸಿದರು.
ಈ ವಿಷಯವಾಗಿ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದೂ ಅವರು ಹೇಳಿದರು.
ಬೈಯ್ಯಪ್ಪನಹಳ್ಳಿಯಲ್ಲಿ ಮನೆ ಹಂಚಿಕೆ
ಬೈಯ್ಯಪ್ಪನಹಳ್ಳಿಯ ಸರ್ವೆ ನಂ.23ರಲ್ಲಿ 1087 ಮನೆಗಳಿರುವ ಬಹುಮಹಡಿ ಕಟ್ಟಡದಲ್ಲಿ ಅರ್ಹರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು.
ಪ್ರತಿ ಮನೆಯ ನಿರ್ಮಾಣ ವೆಚ್ಚ – ₹11.20 ಲಕ್ಷ
ಕೋಗಿಲು ಪ್ರದೇಶದಿಂದ ದೂರ – 7 ಕಿ.ಮೀ.
ಅರ್ಹರ ಪಟ್ಟಿ ಬಂದ ಬಳಿಕ ತಕ್ಷಣ ಮನೆ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಿಎಂ ಹೇಳಿದರು.
ಜಿಬಿಎದಿಂದ ₹5 ಲಕ್ಷ ಸಹಾಯ
ಸಾಮಾನ್ಯ ವರ್ಗಕ್ಕೆ – ಎಲ್ಲಾ ಸಬ್ಸಿಡಿ ಸೇರಿ ₹8.70 ಲಕ್ಷ
ಪರಿಶಿಷ್ಟ ಜಾತಿ/ಪಂಗಡಕ್ಕೆ – ₹9.50 ಲಕ್ಷ
ಜಿಬಿಎ ವತಿಯಿಂದ ಪ್ರತಿ ಮನೆಗೆ ₹5 ಲಕ್ಷ ನೆರವು ನೀಡಲಾಗುವುದು.
ಉಳಿದ ಮೊತ್ತಕ್ಕೆ:
ಸಾಮಾನ್ಯ ವರ್ಗಕ್ಕೆ – ₹2.5 ಲಕ್ಷ
ಎಸ್‌ಸಿ/ಎಸ್‌ಟಿ ವರ್ಗಕ್ಕೆ – ₹1.70 ಲಕ್ಷ
ಸಾಲ ಸೌಲಭ್ಯ ಒದಗಿಸುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಭರವಸೆ ನೀಡಿದ್ದಾರೆ.
ಏನಿದು ಪ್ರಕರಣ?
ಕೋಗಿಲು ಲೇಔಟ್‌ನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 167 ಶೆಡ್‌ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಈ ಹಿಂದೆ ನೋಟಿಸ್ ನೀಡಿದ್ದರೂ ನಿವಾಸಿಗಳು ಜಾಗ ಖಾಲಿ ಮಾಡಿರಲಿಲ್ಲ. ಅನಿವಾರ್ಯವಾಗಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಈ ಘಟನೆ ಬಳಿಕ ಕೇರಳದ ಎಲ್‌ಡಿಎಫ್ ಸರಕಾರ ಇದನ್ನು ‘ಬುಲ್ಡೋಜರ್ ರಾಜಕಾರಣ’ ಎಂದು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This