Home » ಉದ್ಯೋಗ » ರಾಜ್ಯದಲ್ಲಿ 8,5000 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್: ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಪ್ರಕಟ

ರಾಜ್ಯದಲ್ಲಿ 8,5000 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್: ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಪ್ರಕಟ

ಬೆಂಗಳೂರು:- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿಶೇಷವಾಗಿ ದೇಶದಲ್ಲಿ ಉತ್ತಮ ಪೊಲೀಸ್ ವ್ಯವಸ್ಥೆ. ಈ ಬಗ್ಗೆ ನನಗೆ ಹೆಮ್ಮೆ ಇದೆ. ರಾಜ್ಯದಲ್ಲಿ 8,500 ಪೊಲೀಸ್ ಪೇದೆ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ಗೃಹ ಸಚಿವರು ಹೇಳಿದರು.

ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿಶೇಷವಾಗಿ ದೇಶದಲ್ಲಿ ಉತ್ತಮ ಪೊಲೀಸ್ ವ್ಯವಸ್ಥೆ. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದೂ ಹೇಳಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ‘ಪೊಲೀಸ್ ಸಿಬ್ಬಂದಿಗಳ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ’ ಹಾಗೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಉದ್ಘಾಟನೆ’ ಮತ್ತು ‘ಸನ್ಮಿತ್ರ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂಡಿಯಾ ಜಸ್ಟೀಸ್ ರಿಪೋರ್ಟ್ ಪ್ರಕಾರ ಪೊಲೀಸ್ ಯಾವ ರೀತಿ ನಡೆದುಕೊಳ್ಳುತ್ತಿದೆ. ನಾಗರಿಕರಿಗೆ ನ್ಯಾಯ ಸಿಗುವುದು ಸೇರಿದಂತೆ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ಸಮೀಕ್ಷೆ ಮಾಡಿದ್ದಾರೆ. ಕರ್ನಾಟಕ ನಂಬರ್ ಒಂದನೇ ಸ್ಥಾನದಲ್ಲಿದೆ. ಬ್ರಿಟೀಷರ ಕಾಲದಲ್ಲಿ ನಮ್ಮ ದೇಶದ ಪೊಲೀಸರಿಗೆ ಯಾವ ರೀತಿಯ ಸಮವಸ್ತ್ರ ಕೊಡುತ್ತಿದ್ದರು, ಯಾವ ರೀತಿಯಾಗಿ ನಡೆಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತಂದು, ನಡೆಸಿಕೊಂಡು ಬರಲಾಗಿದೆ.

ಬ್ರಿಟೀಷ್ ಕಾಲದಲ್ಲಿ ಸ್ಲೋಚ್ ಹ್ಯಾಟ್ ಹಾಕಿಕೊಳ್ಳುತ್ತಿದ್ದರು. 1953ರಲ್ಲಿ ಆರ್ಮ್ ಫೋರ್ಸ್‌ಗೆ ಹ್ಯಾಟ್ ಪರಿಚಯಿಸಲಾಯಿತು. ಸಾಮಾನ್ಯ ಪೊಲೀಸ್ ಸಿಬ್ಬಂದಿಗೆ ಟರ್ಬನ್ ಹಾಕುತ್ತಿದ್ದನ್ನು ಗಮನಿಸಿದ್ದೇವೆ.

1973ರಲ್ಲಿ ದೇವರಾಜು ಅರಸು ಸಿಎಂ ಆಗಿದ್ದಾಗ ನಮ್ಮ ಪೊಲೀಸ್ ಸಿಬ್ಬಂದಿಗೆ ಸ್ಲೋಚ್ ಹ್ಯಾಟ್ ಪರಿಚಯಿಸಿದರು. ಅಲ್ಲಿಂದ ಇಲ್ಲಿವರೆಗೆ ಯಾವುದೇ ಬದಲಾವಣೆ ಇಲ್ಲದೆ, ಕಷ್ಟನೋ, ಸುಖನೋ ನಮ್ಮ ಸಿಬ್ಬಂದಿ ಅನುಭವಿಸಿಕೊಂಡು ಬಂದಿದ್ದಾರೆ. ಕ್ಯಾಪ್ ಬದಲಾವಣೆ ಮಾಡುವಂತೆ ಅನೇಕ ಬಾರಿ ಬೇಡಿಕೆಗಳು ಬಂದಿವೆ. ಮಳೆ ಬಂದಾಗ ಹೆಚ್ಚು ತೂಕ ಅಗುತ್ತದೆ. ನೋಡುವುದಕ್ಕು ಅಷ್ಟು ಸುಂದರವಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯಗಳು ಬಂದವು. 2015ರಲ್ಲಿ ನಾನು ಗೃಹ ಸಚಿವನಾಗಿದ್ದಾಗಲೂ ಬದಲಾವಣೆಯ ಪ್ರಸ್ತಾವನೆ ಬಂದಿತ್ತು. ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ.

ಈ ಬಾರಿ ಪ್ರಸ್ತಾವನೆ ಬಂದಾಗ ಚರ್ಚೆ ಮಾಡಿದಾಗ, ಇಲಾಖೆಯ ಹಿರಿಯ ಅಧಿಕಾರಿಗಳು, ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕ್ಯಾಪ್ ಧರಿಸುತ್ತಾರೆ ಎಂಬ ಮಾಹಿತಿ ತರಿಸಿಕೊಂಡು ಕ್ಯಾಪ್‌ಗಳನ್ನು ಪ್ರದರ್ಶನ ಮಾಡಿದರು. ಸಿಎಂ ಅವರು ನೀಲಿ ಬಣ್ಣದ ಕ್ಯಾಪ್ ಆಯ್ಕೆ ಮಾಡಿದರು. ಇಲಾಖೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪೊಲೀಸ್ ಇಲಾಖೆಗೆ ಇಂದು ಐತಿಹಾಸಿಕ ದಿನ. ಕ್ಯಾಪ್ ಧರಿಸಿದ ತಕ್ಷಣ ಎಷ್ಟು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಆತ್ಮಸ್ಥೈರ್ಯ ಬಂದಿದೆ. ನಾವು ಕೂಡ ಅಧಿಕಾರಿಗಳಿಗೂ, ನಮಗು ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮಸ್ಥೈರ್ಯ ನಿಮ್ಮಲ್ಲಿ‌ ಮೂಡಿದೆ ಎಂದು ಅವರು ಹೇಳಿದ್ದಾರೆ.

ಇಡೀ ದೇಶದಲ್ಲಿ ಬೇರೆ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆ ಗಮನಿಸಿದರೆ, ಕರ್ನಾಟಕದಲ್ಲಿ ಹೆಚ್ಚಿನಂಶ ಶಾಂತಿಯಿಂದ ಇದೆ. ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಕೋಮು ಗಲಭೆಗಳು, ಅಹಿತಕರ ಘಟನೆಗಳನ್ನು ನಡೆಸಲು ಆಸ್ಪದ ನೀಡಿಲ್ಲ. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಟ್ಟಿಲ್ಲ. ಅದಕ್ಕೆ ಮುಖ್ಯ ಕಾರಣ ಇಲಾಖೆಯ ಸಿಬ್ಬಂದಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಗೆ ಸಂಬಂಧಿಸಿದ ಅನೇಕ ಪ್ರಸ್ತಾವನೆಗಳಿಗೆ ಅನುಮೋದನೆ ಮಾಡಿಕೊಟ್ಟಿದ್ದಾರೆ. ಇನ್‌ಸ್ಪೆಕ್ಟರ್‌ ಹುದ್ದೆಯಿಂದ ಎಸ್‌ಪಿ ಹುದ್ದೆಯವರೆಗಿನ ಅಧಿಕಾರಿಗಳನ್ನು ಎರಡು ವರ್ಷದವರೆಗೆ ವರ್ಗಾವಣೆ ಮಾಡದಂತೆ ಕಾನೂನು ತಂದಿದ್ದೇವೆ. ಕನಿಷ್ಟ ಎರಡು ವರ್ಷ ಒಂದೇ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟರೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಬದಲಾವಣೆ ತಂದಿದ್ದೇವೆ. ಬಹಳ ಜನ ಇದನ್ನು ಪ್ರಶಂಸೆ ಮಾಡಿದ್ದಾರೆ. ಕೆಳ ಹಂತದ ಸಿಬ್ಬಂದಿಗಳಿಗೆ ಎಸ್‌ಪಿ ಹಂತದಲ್ಲಿ ವರ್ಗಾವಣೆ ಮಾಡಲು ಅವಕಾಶ ಮಾಡ ಕೊಟ್ಟಿದ್ದೇವೆ ಎಂದರು.

ಪೊಲೀಸ್ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ: ಜಿ ಪರಮೇಶ್ವರ್

ಪೇದೆ, ಪಿಎಸ್‌ಐ ನೇಮಕಾತಿಗೆ ಮುಖ್ಯಮಂತ್ರಿಗಳು ಅನುಮತಿ ಕೊಟ್ಟಿದ್ದಾರೆ. ಕೆಎಸ್‌ಆರ್‌ಪಿ, ಸಿಎಆರ್, ಸಿವಿಲ್ ಸೇರಿದಂತೆ 16 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇವೆ. 8500 ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಒಂದು ವಾರದಲ್ಲಿ ನೋಟಿಫಿಕೇಷನ್ ಮಾಡುತ್ತೇವೆ ಎಂದು ಹೇಳಿದರು.

ಪೊಲೀಸ್ ಗೃಹ ಯೋಜನೆಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲಾಖೆಯ ಸಿಬ್ಬಂದಿಗಳಿಗೆ ಉತ್ತಮ ವ್ಯವಸ್ಥೆಯನ್ನು‌ ಕಲ್ಪಿಸಲಾಗಿದೆ. 16 ಸಾವಿರ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದೇವೆ. ಈ ಯೋಜನೆಯನ್ನು ಐದು ವರ್ಷ ಮುಂದುವರೆಸುವುದಾಗಿ ಸಿಎಂ ಅವರು ಹೇಳಿದ್ದಾರೆ. ಅವರಿಗೆ ಅಭಿನಂದನೆಗಳು. ಪೊಲೀಸರ ಆರೋಗ್ಯ ತಪಾಸಣೆ ವೆಚ್ಚವನ್ನು 1500 ರೂ. ಹೆಚ್ಚಿಸಲಾಗಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಕುಟುಂಬಸ್ಥರಿಗೆ ಉದ್ಯೋಗ ಕೊಡಬೇಕು ಎಂಬ ನಿಯಮ ಇದೆ.‌ ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಇದಕ್ಕೆ ಹೆಚ್ವಿನ ರೀತಿಯಲ್ಲಿ ಕ್ರಮ ತೆಗೆದುಕೊಂಡು, ನೂರಾರು ಮೃತ ಪೊಲೀಸರ ಕುಟುಂಬದವರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ ರಜೆ ತೆಗೆದುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಸರಳಗೊಳಿಸಲಾಗಿದೆ.‌ ಪೊಲೀಸ್ ಸಿಬ್ಬಂದಿಗಳ ಪರವಾದ ವಾತಾವರಣವನ್ನು ಅಧಿಕಾರಿಗಳು ಸೃಷ್ಟಿ ಮಾಡಿದ್ದಾರೆ. ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಒಳ್ಳೆಯ ವಾತಾವರಣ ಮಾಡಿಕೊಟ್ಟಿದೆ. ರಾಜ್ಯದ ಜನತೆಯ ಆಪೇಕ್ಷೆಯಂತೆ ಕೆಲಸ ಮಾಡಬೇಕಿದೆ. ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿ ಮಾಡಬೇಕು ಎಂಬ ಬದ್ಧತೆ ನಮಗೆ ಇದೆ. ಆ ದೃಷ್ಟಿಯಲ್ಲಿ ತಾವೆಲ್ಲ ಕೆಲಸ ಮಾಡುತ್ತೀರಿ ಎಂದು ಭರವಸೆ ವ್ಯಕ್ತಪಡಿಸಿದರು.

ಮಾದಕ ವಸ್ತು ಸಮಾಜಕ್ಕೆ ದೊಡ್ಡ ಪಿಡುಕು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು‌ ಮುಖ್ಯಮಂತ್ರಿಯವರು ಸದನದಲ್ಲಿ ಘೋಷಣೆ ಮಾಡಿದ್ದಾರೆ. ಈ ದೃಷ್ಟಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಅನೇಕ‌ ಕೆಲಸಗಳು ನಡೆಯುತ್ತಿವೆ. ಕಳೆದ ಎರಡು ವರ್ಷದಿಂದ ಸುಮಾರು 250 ರಿಂದ 300 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿ, ನಾಶಪಡಿಸಲಾಗಿದೆ. ಇಷ್ಟೊಂದು ಎಚ್ಚರಿಕೆಯಿಂದ ಕೆಲಸ ಮಾಡಿದರು ಸಹ ಡ್ರಗ್ಸ್ ಬರುತ್ತಿದೆ. ಪಾರ್ಸಲ್ ಸೇರಿದಂತೆ ವಿವಿಧ ರೂಪದಲ್ಲಿ ಬರುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಪೆಡ್ಲರ್‌ಗಳು ಮತ್ತು ಮಾದಕ ವ್ಯಸನಿಗಳ ಹಿಂದೆ ಒಬ್ಬ ಪೊಲೀಸರನ್ನು ಬಿಡುತ್ತೇವೆ. ಸನ್ಮಿತ್ರ ಕಾರ್ಯಕ್ರಮದಲ್ಲಿ ಅವರ ನಿಗಾವಹಿಸಲು ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗುತ್ತಿದೆ. ರಾಜ್ಯದಲ್ಲಿ ಜಾರಿಗೆ ತಂದಿರುವ ಮನೆ‌ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಪ್ರತಿ‌ಯೊಂದು ಮನೆಯ ಮಾಹಿತಿ ತೆಗೆದುಕೊಂಡರೆ, ದೂರುಗಳು ಬಂದಾಗ ಸಹಾಯ ಆಗುತ್ತದೆ.‌ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಅನುಕೂಲವಾಗುತ್ತದೆ ಎಂದರು.

ಇಡೀ ದೇಶದಲ್ಲಿ ಮೊದಲ ಬಾರಿಗೆ ಡಿಜಿಪಿ ಹಂತದ ಅಧಿಕಾರಿಯನ್ನು ಮಾದಕ ದ್ರವ್ಯ ನಿಯಂತ್ರಣ ವಿಭಾಗಕ್ಕೆ ನಿಯೋಜಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು‌ ಪಂಗಡದ ಜನರ‌ ಮೇಲಿನ ದೌರ್ಜನ್ಯ‌ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ 33 ಡಿಸಿಆರ್‌ಇ ಠಾಣೆಗಳನ್ನು ಸ್ಥಾಪಿಸಲಾಗಿದೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಬೇರೆ ಇಲಾಖೆಗಳಿಗೆ ಹೋಲಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ರಾಜ್ಯದ ಕಣ್ಣು. ಯಾವುದೇ ಸರ್ಕಾರಕ್ಕೆ ಕೀರ್ತಿ‌ ಬರಬೇಕಾದರೆ ಪೊಲೀಸ್ ಇಲಾಖೆಯಿಂದ ಸಾಧ್ಯ. ಶಾಂತಿ, ಸುವ್ಯವಸ್ಥೆ ಕಾಪಾಡುವುದು ಸರ್ಕಾರಕ್ಕೆ ನೇರವಾಗಿ ತಲುಪುತ್ತದೆ. ನಾವು ಬರೀ‌ ಕ್ಯಾಪ್ ಬದಲಾಯಿಸಿಲ್ಲ. ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ನಾವೆಲ್ಲ ಮಾಡಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This