ಬೀದರ್ | ಶಾಲಾ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆ; ತೀವ್ರ ಖಂಡನೀಯ
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವಸತಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಹೆರಿಗೆಯಾದ ಘಟನೆ ಅಘಾತಕಾರಿಯಾಗಿದೆ ಎಂದು ಬೀದರ್ನ ಕೆಎಲ್ಇ ಸಂಸ್ಥೆಯ ನಿರ್ದೇಶಕಿ, ಹೋರಾಟಗಾರ್ತಿ ಕ್ರಾಂತಿ ಕಲವಾಡಿಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ʼವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಹೆರಿಗೆಯಾಗಿದೆ ಅಂದರೆ ಬಾಲಕಿ ಮೇಲೆ ಈ ಹಿಂದೆ ಅತ್ಯಾಚಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಮಕ್ಕಳ ಮೇಲೆ ನಿಗಾವಹಿಸಬೇಕಾದ ವಸತಿ ಶಾಲೆಯ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಾರ್ಡ್ನ್ ಅವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದೆʼ ಎಂದು ದೂರಿದ್ದಾರೆ.
ʼಮುಗ್ಧ ಮನಸ್ಸಿನ ಅಪ್ರಾಪ್ತೆಗೆ ಹೆರಿಗೆಯಾಗಿ ಗಂಡು ಮಗು ಜನಿಸಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಅಮಾನವಿಯ ಕೃತ್ಯ ನಾಗರಿಕ ಸಮಾಜಕ್ಕೆ ಕಳಂಕವನ್ನುಂಟು ಮಾಡುತ್ತದೆ. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕುʼ ಎಂದರು.
ʼವಸತಿ ಶಾಲೆಯ ಸಿಬ್ಬಂದಿಗೆ ಅಮಾನತು ಮಾಡಿದ್ದರೆ ಅಷ್ಟೇ ಸಾಲದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಮಹಿಳಾ ಆಯೋಗ ಮಧ್ಯೆ ಪ್ರವೇಶಿಸಿ ಆರೋಪಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಬೇಕುʼ ಎಂದು ಅವರು ಆಗ್ರಹಿಸಿದ್ದಾರೆ.







