ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಣ ಬಡಿದಾಟ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ನಡುವೆ ಕುತೂಹಲಕಾರಿ ಸಂಗತಿ ನಡೆದಿದೆ. ಬಿಜೆಪಿ ಹೈಕಮಾಂಡ್ ನಾಯಕ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಹಲವು ನಾಯಕರು ಅಮಿತ್ ಶಾರನ್ನು ಭೇಟಿಗೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ಜನಾರ್ದನ ರೆಡ್ಡಿ ಶಾ ಅವರನ್ನು ಭೇಟಿಯಾಗಿ ಗೌಪ್ಯ ಚರ್ಚೆ ನಡೆಸಿದ್ದಾರೆ ಎಂಬ ವಿಚಾರ ಸಂಚಲನ ಸೃಷ್ಟಿಸಿದೆ.
ದೋಸ್ತಿಗಳಂತಿದ್ದ ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ನಡುವೆ ಇದೀಗ ಒಡಕು ಮೂಡಿದೆ. ಅಲ್ಲದೆ ಪಕ್ಷದಲ್ಲಿನ ಕಚ್ಚಾಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಾನು ಹೈಕಮಾಂಡ್ ನಾಯಕರಿಗೆ ತಿಳಿಸಿ ಬರುತ್ತೇನೆ ಎಂದು ಶ್ರೀರಾಮುಲು ಹೇಳಿದ್ದರು. ನಿನ್ನೆ ಅಮಿತ್ ಶಾ ಬಂದಾಗಲೂ ಅವರನ್ನು ಭೇಟಿಯಾಗಲು ಬಿ.ಶ್ರೀರಾಮುಲು ಹರಸಾಹಸ ಪಟ್ಟಿದಾರೆ. ಆದರೆ, ಇದರ ನಡುವೆ ಜನಾರ್ದನ ರೆಡ್ಡಿ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಮೂಲಕ ರಾಮುಲು ಅವರಿಗೆ ಟಕ್ಕರ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಶ್ರೀರಾಮುಲು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ, ಇಲ್ಲಿನ ವಿಚಾರಗಳ ಬಗ್ಗೆ ತಿಳಿಸುತ್ತೇನೆ ಎಂದು ಬೇಸರದಿಂದ ಮಾತನಾಡಿದ್ದರು. ಇದಾದ ಬಳಿಕ ಶ್ರೀರಾಮುಲು ಅವರನ್ನು ದೆಹಲಿಗೆ ಬರುವಂತೆ ಹೇಳಿದ್ದು ಹೈಕಮಾಂಡ್, ನಂತರ ದಿಢೀರ್ ಬರುವುದು ಬೇಡ ಎಂದಿತ್ತು. ಆದರೆ ಅಮಿತ್ ಶಾ ಅವರೇ ರಾಜ್ಯಕ್ಕೆ ಬಂದಿರುವಾಗ ಇಲ್ಲೇ ಭೇಟಿಯಾಗಿ ವಿಚಾರ ತಿಳಿಸುವುದು ಒಳ್ಳೆಯದು ಎಂದಿಕೊಂಡಿದ್ದರು ಶ್ರೀರಾಮುಲು. ಆದರೆ, ಜನಾರ್ದನ ರೆಡ್ಡಿ ಅವರು ಭೇಟಿಯಾಗಿ ಚರ್ಚೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
2023ರ ಎಲೆಕ್ಷನ್ ನಲ್ಲಿ ತುಂಬಾ ಕಷ್ಟ್ ಉಂಟು ಮಾಡಿದರು ಅದೆ ಕಾರಣಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ನಿನ್ನೆ ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಅವರ ಮೂಲಕ ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಇದು ರಾಜ್ಯ ರಾಜಕಾರಣಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಶ್ರೀರಾಮುಲು ಅವರು ಅಮಿತ್ ಶಾ ಅವರೊಂದಿಗೆ ಉತ್ತಮ ನಂಟು ಹೊಂದಿದ್ದರೂ ಅವರ ಭೇಟಿಗೆ ಅವಕಾಶ ಸಿಗದಿರುವುದು ಒಂದೆಡೆಯಾದರೆ, ರಾಮುಲು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜನಾರ್ದನ ರೆಡ್ಡಿ ಅವರು ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಅಮಿತ್ ಶಾ ಅವರು ಬೇರೆ ಇನ್ಯಾರನ್ನೂ ಭೇಟಿಯಾಗದೆ ಜನಾರ್ದನ ರೆಡ್ಡಿ ಅವರಿಗೆ ಮಾತ್ರವೇ ಭೇಟಿಗೆ ಅವಕಾಶ ನೀಡಲು ಕಾರಣವೇನು? ಬಣ ಬಡಿದಾಟ, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆ ನಡೆಸದೆ, ಜನಾರ್ದನ ರೆಡ್ಡಿ ಅವರೊಂದಿಗೆ ಗೌಪ್ಯ ಚರ್ಚೆ ಏನು ನಡೆಸಿರಬಹುದು ಎಂಬ ಬಗ್ಗೆಯೂ ಚರ್ಚೆಗಳು ಜೋರಾಗಿವೆ.
ಶ್ರೀರಾಮುಲು ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ಕೋರ್ ಕಮಿಟಿ ಸಭೆಯಲ್ಲಿ ನಡೆದ ಬೆಳವಣಿಗೆ, ರಾಜ್ಯಸಭಾ ಸದಸ್ಯ ಸ್ಥಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಹೈಕಮಾಂಡ್ಗೆ ಅವಕಾಶ ಕೇಳಿದ್ದರು ಎನ್ನಲಾಗಿದೆ. ಆದರೆ ರೆಡ್ಡಿ ಸುಲಭವಾಗಿ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆಯೂ ನಡೆಸಿರುವುದು ಬಿಜೆಪಿಯಲ್ಲೇ ಹೊಸ ಚರ್ಚೆಗಳನ್ನು ಮುಂದಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ರೇಸ್ಗೆ ಜನಾರ್ದನ ರೆಡ್ಡಿಯೂ ಇಳಿದಿದ್ದಾರಾ? ಎಂಬ ಚರ್ಚೆಯೂ ನಡೆಯುತ್ತಿದೆ.







