ಬೆಂಗಳೂರು, ಮಾರ್ಚ್ 19 : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನ ಜಾರಿಗೊಳಿಸಿದ ಬಳಕ ಬಸ್ ಟಿಕೆಟ್ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಮದ್ಯ ದರ ಹೆಚ್ಚಿಸುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದ್ದು, ಮದ್ಯ ಮಾರಾಟದ ಟಾರ್ಗೆಟ್ ಹೆಚ್ಚಳ, ಬೆಲೆ ಹೆಚ್ಚಳ ಕುರಿತು ವಿಧಾನಸಭೆಯಲ್ಲಿ ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ ಹಾಗೂ ಕಾಂಗ್ರೆಸ್ನ ಬಿ.ಆರ್.ಪಾಟೀಲ್ ಗಂಭೀರವಾಗಿಯೇ ವಾದ ಮಂಡಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಮದ್ಯ ಮಾರಾಟದ ಟಾರ್ಗೆಟ್ ಹೆಚ್ಚಳ, ಬೆಲೆ ಹೆಚ್ಚಳದ ಕುರಿತು ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹೆಂಗಸರಿಗೆ ಮಾಸಿಕ 2 ಸಾವಿರ, ಓಡಾಟಕ್ಕೆ ಬಸ್ ಫ್ರೀ ಎಲ್ಲವನ್ನೂ ಕೊಟ್ಟಿದ್ದೀರಿ. ಇದಕ್ಕೆ ಕೊಡುತ್ತಿರುವುದು ಖಜಾನೆ ದುಡ್ಡು ಅಲ್ಲವೇ? ಹೆಂಗಸರಿಗೆ ಖುಷಿಪಡಿಸುವಂತೆ ಕುಡಿಯುವ ಗಂಡಸರಿಗೂ ವಾರಕ್ಕೆ ಎರಡು ಬಾಟಲಿ ಫ್ರೀ ಕೊಡಿ. ಸೊಸೈಟಿಗಳ ಮೂಲಕ ಹಂಚಿ ಬೇಡಿಕೆ ಇಟ್ಟಿದ್ದಾರೆ.
ಇನ್ನೂ ರಾಜ್ಯ ಸರ್ಕಾರ ಮದ್ಯ ಮಾರಾಟದ ಟಾರ್ಗೆಟ್ ಹೆಚ್ಚಿಸಿ, ಅಬಕಾರಿ ಆದಾಯವನ್ನು 40 ಸಾವಿರ ಕೋಟಿಗೆ ನಿಗದಿ ಮಾಡಿರುವುದು ಪಾಪದ ಕೆಲಸವೇ? ಹೆಂಗಸರಿಗೆ ಫ್ರೀ ಕೊಟ್ಟು ಗಂಡಸರಿಂದ ಹಣ ಪೀಕುವುದು ತಪ್ಪಲ್ಲವೇ? ಸಂಪೂರ್ಣ ಪಾನ ನಿಷೇಧ ಜಾರಿ ಏಕೆ ಸಾಧ್ಯವಿಲ್ಲ? ಇಂತಹ ಹಲವು ಪ್ರಶ್ನೆ, ವಾದ -ಪ್ರತಿವಾದಗಳು ನಡೆದವು.
ಇನ್ನೂ ಚುನಾವಣೆಯಲ್ಲಿ ಗೆದ್ದು ಬಂದು ಇಂತಹ ವ್ಯವಸ್ಥೆ ಮಾಡಿ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ಕೃಷ್ಣಪ್ಪ ಅವರಿಗೆ ಸಲಹೆ ಮಾಡಿದರೆ, ‘ಈಗಲೇ ಈ ಸ್ಥಿತಿ ಫ್ರೀ ಮದ್ಯ ಕೊಟ್ಟರೆ ಏನಾಗಬಹುದು? ಎಂದು ಸ್ಪೀಕರ್ ಹಾಸ್ಯ ಮಾಡಿದರು. ಇನ್ನೂ ವೇಳೆ ಮಾತು ಮುಂದುವರೆಸಿದ ಕೃಷ್ಣಪ್ಪ, ‘ಈಗೇನಾಗಿದೆ? ನಮ್ಮ 224 ಶಾಸಕರಲ್ಲಿ ಯಾರು ಕುಡಿಯಲ್ಲ ಹೇಳಿಬಿಡಲಿ, ಎಂದು ಪ್ರಶ್ನಿಸಿದರು. ಈ ಮಾತಿಗೆ ಜೆಡಿಎಸ್ ಗುಂಪಿನ ಉಪನಾಯಕಿ ಶಾರದಾ ಪೂರ್ಯನಾಯಕ್, 224 ಶಾಸಕರು ಎಂದು ನಮ್ಮನ್ನೂ ಸೇರಿಸಿಕೊಂಡು ಏಕೆ ಹೇಳುತ್ತೀರಿ ಎಂದು ಆಕ್ಷೇಪಿಸಿದರು.
ಫ್ರೀ ಬೇಡ, ಮದ್ಯ ಬಂದ್ ಮಾಡಿ : ಬಿ.ಆರ್.ಪಾಟೀಲ್
ಇನ್ನೂ ಈ ವೇಳೆ ಆಡಳಿತಾರೂಢ ಕಾಂಗ್ರೆಸ್ನ ಬಿ.ಆರ್.ಪಾಟೀಲ್ ಅವರು ಮಾತನಾಡಿ, ನನಗೆ ಸರ್ವಾಧಿಕಾರಿಯಾಗುವ ಅವಕಾಶ ಸಿಕ್ಕರೆ ಎರಡು ಗಂಟೆಯಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿ ಮಾಡುತ್ತೇನೆ. ಪಾಪದ ಹಣದಿಂದ ಅಭಿವೃದ್ಧಿ ಮಾಡಬೇಕೇ? ಎಂದು ಪ್ರಶ್ನಿಸಿದರು. ನಮ್ಮ ಭಾಗದ ಮಹಿಳೆಯರು ಅನ್ನಭಾಗ್ಯ, ಗೃಹಲಕ್ಷ್ಮೀ ಸೇರಿ ಯಾವ ಫ್ರೀ ಭಾಗ್ಯವೂ ಬೇಡ ಸ್ವಾಮಿ.., ಮದ್ಯ ಮಾರಾಟ ಬಂದ್ ಮಾಡಿ ನಮ್ಮ ಸಂಸಾರ ಉಳಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸಿಎಂ ಸಲಹೆಗಾರನಾಗಿದ್ದ ನಾನು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೆ. ಆದರೆ, ಒಪ್ಪಿಲ್ಲ ಎಂದು ಬೇಸರ ತೋಡಿಕೊಂಡರು.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಬಕಾರಿ ಆದಾಯದ ಟಾರ್ಗೆಟ್ ಹೆಚ್ಚಿಸಿಕೊಂಡು ಹೆಚ್ಚೆಚ್ಚು ಮದ್ಯ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತಿದೆ. ಗುಜರಾತ್ನಲ್ಲಿ ಪಾನ ನಿಷೇಧ ಜಾರಿಯಾಗಿದ್ದು, ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ ಈ ತೀರ್ಮಾನ ಮಾಡಲಿ. ನಂತರ ಕೇಂದ್ರದ ಮೇಲೆ ಒತ್ತಡ ತರೋಣ ಎಂದು ಬಿಜೆಪಿಯ ಹಲವು ಸದಸ್ಯರು ಸಲಹೆ ನೀಡಿದರು.







