Home » ರಾಜ್ಯ » ಕಾನ್ಸೆಬಲ್ ಏಕಾಂಗಿ ಪ್ರತಿಭಟನೆ: ಬೆಂಬಲಕ್ಕೆ ಧಾವಿಸಿದ ಶಾಸಕ ಸುರೇಶ್ ಕುಮಾ‌ರ್!

ಕಾನ್ಸೆಬಲ್ ಏಕಾಂಗಿ ಪ್ರತಿಭಟನೆ: ಬೆಂಬಲಕ್ಕೆ ಧಾವಿಸಿದ ಶಾಸಕ ಸುರೇಶ್ ಕುಮಾ‌ರ್!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತರಾಗಿದ್ದ ದಯಾನಂದ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಏಕಾಏಕಿ ಮಾಡಿರುವ ದಯಾನಂದ್‌ ಅವರ ಸಸ್ಪೆಂಡ್ ರದ್ದುಪಡಿಸಬೇಕೆಂದು ರಾಜಭವನ ಮುಂದೆ ಹೆಡ್ ಕಾನ್ಸ್‌ಟೇಬಲ್ ಏಕಾಂಗಿ ಪ್ರತಿಭಟನೆ ನಡೆಸಿದ್ದರು.

ಇದೀಗ ಹೆಡ್‌ಕಾನ್‌ಸ್ಟೇಬಲ್‌ಗೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಅಮಾನತು ಖಂಡಿಸಿದ ಹೆಡ್‌ಕಾನ್‌ಸ್ಟೇಬಲ್ ನರಸಿಂಹ ರಾಜು ಜೊತೆ ಫೋನ್‌ನಲ್ಲಿ ಶಾಸಕರು ಮಾತನಾಡಿದ್ದಾರೆ. ಅಲ್ಲದೇ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶಾಸಕ ಸುರೇಶ್‌ ಕುಮಾರ್‌ ಅವರು, ನಾನು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ಕೇಳಿಕೊಳ್ಳುವುದೇನೆಂದರೆ ನರಸಿಂಹ ರಾಜು ಅವರ ಅಳಲು ಇಡೀ ಪೊಲೀಸ್ ಇಲಾಖೆಯ ಅಳಲು ಎಂಬುದನ್ನು ಗಮನಿಸಲಿ.

ಪ್ರಾಮಾಣಿಕ ಮನಸ್ಸಿನಿಂದ ಇವರು ಮಾಡಿರುವ ಪ್ರತಿಭಟನೆಯನ್ನು ಸಕಾರಾತ್ಮಕವಾಗಿ ಕಾಣಲಿ. ಯಾವುದೇ ಕಾರಣಕ್ಕೂ ಈ ನಿಷ್ಠಾವಂತ ಪೊಲೀಸ್ ಪೇದೆಯ ಮೇಲೆ ಯಾವುದೇ ಕಠಿಣ ಕ್ರಮ ಜರುಗಿಸದಿರಲಿ ಎಂದು ತಿಳಿಸಿದ್ದಾರೆ. ಸಾಮಾನ್ಯ ಪೊಲೀಸ್ ಪೇದೆಯ ನೈತಿಕ ಸ್ಥೈರ್ಯ ಕುಸಿದು ಹೋದರೆ, ಇಲಾಖೆಯನ್ನು ಸರಿಪಡಿಸುವುದು ಬಹಳ ಕಷ್ಟವಾಗುತ್ತದೆ. ಇಂತಹ ಪೊಲೀಸ್ ಸಿಬ್ಬಂದಿ ಬೀದಿಯಲ್ಲಿ ಗಸ್ತು ಹೊಡೆಯುತ್ತಿದ್ದಾರೆ ಎಂಬ ಕಾರಣದಿಂದ ನಾವೆಲ್ಲ ಮನೆಯಲ್ಲಿ ಮನೆಗಳಲ್ಲಿ ನೆಮ್ಮದಿಯಿಂದ ಇದ್ದೇವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಇಡೀ ಸಮಾಜ ದಯಾನಂದ್‌ರಿಂದ ಹಿಡಿದು ನರಸಿಂಹರಾಜು ವರೆಗೆ ಇರುವ ನಿಷ್ಠಾವಂತ ಅಧಿಕಾರಿಗಳ ಪರವಾಗಿ ನಿಲ್ಲಲು ಇದು ಸರಿಯಾದ ಸಮಯ, ಸರಿಯಾದ ಕಾರಣ, ಸರಿಯಾದ ಗಳಿಗೆ. ರಾಜ್ಯ ಸರ್ಕಾರ ಮುಟ್ಟು ವಿದ್ಯಮಾನವನ್ನು ಯಾವುದೇ ಸೇಡಿನ ಮನೋಭಾವವಿಲ್ಲದೆ, ಪ್ರಾಂಜಲ ಮನಸ್ಸಿನಿಂದ ವಿಮರ್ಶಿಸಿ ವಿವೇಚನಾಯುಕ್ತ ಹೆಜ್ಜೆ ಇಡಬೇಕು ಎಂದು‌ ಶಾಸಕ ಸುರೇಶ್‌ ಕುಮಾರ್ ಆಗ್ರಹಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This