ವಾಷಿಂಗ್ಟನ್:2023ರಲ್ಲಿ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವ ತಲುಪಿದ ಭಾರತದ ಚಂದ್ರಯಾನ–3 ಮಿಷನ್ ಬಗ್ಗೆ ಅಮೆರಿಕ ಸಂಸದ ರಿಚ್ ಮೆಕ್ಕಾರ್ಮಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ–ಅಮೆರಿಕ ಸಂಬಂಧಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
“ಅಮೆರಿಕದಲ್ಲಿ ಒಂದು ಕಟ್ಟಡ ಕಟ್ಟಲೂ ಸಾಕಾಗದ ಹಣದಲ್ಲಿ ಭಾರತ ಚಂದ್ರನ ಅಂಗಳ ತಲುಪಿದೆ”
ಎಂದು ಹೇಳಿ ಇಸ್ರೋ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.
₹726 ಕೋಟಿ (ಸುಮಾರು 80 ಮಿಲಿಯನ್ ಡಾಲರ್) ವೆಚ್ಚದಲ್ಲಿ ಈ ಮಹತ್ವದ ಸಾಧನೆ ಮಾಡಿರುವುದು, ಬಜೆಟ್ ಸ್ನೇಹಿ ಯೋಜನೆಗಳಿಗೆ ಹೆಸರಾದ ಇಸ್ರೋಗೆ ಜಾಗತಿಕ ಮಟ್ಟದಲ್ಲಿ ಗೌರವ ತಂದಿದೆ ಎಂದು ಅವರು ಹೇಳಿದರು.
ಅತ್ಯಧಿಕ ವೆಚ್ಚದ ಬಾಹ್ಯಾಕಾಶ ಯೋಜನೆಗಳಿಗೆ ಹೆಸರಾದ ಅಮೆರಿಕಕ್ಕೆ ಇದು ಕಲಿಕೆಯ ಉದಾಹರಣೆ ಎಂದೂ ಅಭಿಪ್ರಾಯಪಟ್ಟರು.
ಡಾಲರ್ ಎದುರು ರುಪಾಯಿ 90.78ಕ್ಕೆ ಕುಸಿತ : ಸಾರ್ವಕಾಲಿಕ ಕನಿಷ್ಠ ಮಟ್ಟ
ಮುಂಬೈ:
ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆಯಿಂದಾಗಿ ಡಾಲರ್ ಎದುರು ಭಾರತೀಯ ರುಪಾಯಿ 44 ಪೈಸೆ ಕುಸಿದು 90.78ಕ್ಕೆ ತಲುಪಿದೆ.
ಇದು ರುಪಾಯಿಯ ಸರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ.
ಸತತ ಮೂರನೇ ದಿನವೂ ರುಪಾಯಿ ಮೌಲ್ಯ ಕುಸಿತ ಕಂಡಿದೆ.
ಷೇರುಪೇಟೆಯಿಂದ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದಿರುವುದು ಹಾಗೂ ಡಾಲರ್ಗೆ ಬೇಡಿಕೆ ಹೆಚ್ಚಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವೆಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ‘ವಂದೇ ಮಾತರಂ’ ಥೀಮ್ನಲ್ಲಿ
ನವದೆಹಲಿ:
ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಈ ವರ್ಷದ ಗಣರಾಜ್ಯೋತ್ಸವವನ್ನು ಇದೇ ಥೀಮ್ನಲ್ಲಿ ಆಚರಿಸಲಾಗುತ್ತಿದೆ.
ಕರ್ತವ್ಯ ಪಥದುದ್ದಕ್ಕೂ ವಂದೇ ಮಾತರಂ ಗೀತೆಯ ಆರಂಭಿಕ ಚರಣಗಳನ್ನು ಚಿತ್ರಗಳ ಮೂಲಕ ಪ್ರದರ್ಶಿಸಲಾಗುತ್ತದೆ
ಕವಿ ಬಂಕಿಮ ಚಂದ್ರ ಚಟರ್ಜೀ ಅವರಿಗೆ ಗೌರವ ಸಲ್ಲಿಸುವಂತೆ ಮುಖ್ಯ ವೇದಿಕೆ ಅಲಂಕರಿಸಲಾಗುತ್ತದೆ
‘ವಿವಿಐಪಿ’ ಎಂಬ ಪದ ಬಳಕೆ ಕೈಬಿಟ್ಟು, ಭಾರತೀಯ ನದಿಗಳ ಹೆಸರಿನಲ್ಲಿ ಸ್ಥಳಗಳಿಗೆ ನಾಮಕರಣ
ಆಹ್ವಾನ ಪತ್ರಿಕೆಗಳಲ್ಲಿ ‘ವಂದೇ ಮಾತರಂ’ ಲೋಗೋ ಮುದ್ರಣೆ
ಪರೇಡ್ ಕೊನೆಯಲ್ಲಿ ಗೀತೆಯ ಥೀಮ್ ಹೊಂದಿದ ಬ್ಯಾನರ್ಗಳೊಂದಿಗೆ ಬಲೂನ್ಗಳನ್ನು ಆಕಾಶಕ್ಕೆ ಹಾರಿಸುವುದು
ಜನವರಿ 19ರಿಂದ 26ರವರೆಗೆ ದೇಶದ 120ಕ್ಕೂ ಹೆಚ್ಚು ನಗರಗಳ 235 ಸ್ಥಳಗಳಲ್ಲಿ ಸೇನೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬ್ಯಾಂಡ್ ಪ್ರದರ್ಶನಗಳು ನಡೆಯಲಿವೆ.
1923ರಲ್ಲಿ ಪ್ರಕಟವಾದ ತೇಜೇಂದ್ರ ಕುಮಾರ್ ಮಿತ್ರ ರಚಿಸಿದ ವಂದೇ ಮಾತರಂ ಕುರಿತ ವರ್ಣಚಿತ್ರಗಳ ಪ್ರದರ್ಶನವೂ ನಡೆಯಲಿದೆ.
ಕೇಂದ್ರದಿಂದ 242 ಅಕ್ರಮ ಜೂಜು ವೆಬ್ಸೈಟ್ಗಳು ಬ್ಲಾಕ್
ನವದೆಹಲಿ:
ಆನ್ಲೈನ್ ಜೂಜಿನಿಂದ ಜನರಿಗೆ, ವಿಶೇಷವಾಗಿ ಯುವಕರಿಗೆ ಆಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಹಾನಿಯನ್ನು ತಡೆಯುವ ಉದ್ದೇಶದಿಂದ,
ಕೇಂದ್ರ ಸರ್ಕಾರ 242 ಕಾನೂನುಬಾಹಿರ ಬೆಟ್ಟಿಂಗ್ ಮತ್ತು ಜೂಜು ವೆಬ್ಸೈಟ್ ಲಿಂಕ್ಗಳನ್ನು ಬ್ಲಾಕ್ ಮಾಡಿದೆ.
ಕಳೆದ ಆಗಸ್ಟ್ನಲ್ಲಿ ದುಡ್ಡಿನೊಂದಿಗೆ ಆಡಬಹುದಾದ ಜೂಜು ಆ್ಯಪ್ಗಳನ್ನು ನಿಷೇಧಿಸಲಾಗಿತ್ತು.
ಇದುವರೆಗೆ 7,800ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
“ಟೈಂ ಆಯ್ತು, ಫ್ಲೈಟ್ ಹಾರಿಸಲ್ಲ” – ಇಂಡಿಗೋ ವಿಮಾನದಲ್ಲಿ ಹೈಡ್ರಾಮ
ಮುಂಬೈ:
ಥಾಯ್ಲೆಂಡ್ನ ಕ್ರಾಬಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಭಾರೀ ಗೊಂದಲ ಉಂಟಾಗಿದೆ.
ವಿಮಾನ ಹೊರಡಲು ಸಿದ್ಧವಾಗಿದ್ದಾಗಲೇ ಪೈಲಟ್,
“ನನ್ನ ಕರ್ತವ್ಯ ಅವಧಿ ಮುಗಿದಿದೆ, ಇನ್ನು ವಿಮಾನ ಹಾರಿಸಲಾರೆ”
ಎಂದು ಹೇಳಿ ನಿರಾಕರಿಸಿದರು.
ಇದರಿಂದ ವಿಮಾನ ಸುಮಾರು 3 ಗಂಟೆ ವಿಳಂಬವಾಯಿತು.
ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿಯ ನಡುವೆ ವಾಗ್ವಾದ ನಡೆಯಿತು. ಓರ್ವ ಸಿಬ್ಬಂದಿ ಸಿಟ್ಟಿಗೆದ್ದು ವಿಮಾನದ ನಿರ್ಗಮನ ದ್ವಾರ ಒದ್ದ ಘಟನೆ ಕೂಡ ಸಂಭವಿಸಿದೆ.
ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನ ಬೆಳಿಗ್ಗೆ 10 ಗಂಟೆಗೆ ಇಳಿಯಬೇಕಿದ್ದರೆ, ಮಧ್ಯಾಹ್ನ 1 ಗಂಟೆಗೆ ಲ್ಯಾಂಡ್ ಆಯಿತು.
ಇಂಡಿಗೋ ಸ್ಪಷ್ಟನೆ:
ವಿಮಾನ ತಡವಾಗಿ ಬಂದಿರುವುದು, ವಾಯು ಸಂಚಾರ ದಟ್ಟಣೆ ಹಾಗೂ ಸಿಬ್ಬಂದಿ ಕರ್ತವ್ಯ ಸಮಯ ಮೀರಿದ್ದರಿಂದ ವಿಳಂಬವಾಗಿದೆ.
ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ ಇಬ್ಬರು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ಸಂಸ್ಥೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದೆ.







