ಗ್ಯಾರಂಟಿ ಸೌಲಭ್ಯಗಳು: ʼಪಂಚ ಗ್ಯಾರಂಟಿʼಗಳ ಮೂಲಕವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಆ ಯೋಜನೆಗಳೇ ಹೊರೆಯಾಗುತ್ತಿದೆ. ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವ ನಿಧಿ ಯೋಜನೆಗಳ ಜಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ.ಆರ್ಥಿಕ ಹೊರೆಯಿಂದ ಕಂಗೆಟ್ಟಿರುವ ಸರ್ಕಾರ ವಿವಿಧ ರೀತಿಯಲ್ಲಿ ಬೆಲೆ ಏರಿಕೆ ಅಸ್ತ್ರವನ್ನು ಪ್ರಯೋಗ ಮಾಡುತ್ತಿದೆ
ಮೊದಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನರು, ಇದೀಗ ಸರ್ಕಾರ ವಿವಿಧ ರೀತಿಯಲ್ಲಿ ಬೆಲೆ ಏರಿಸುತ್ತಿರುವುದಕ್ಕೆ ರೋಸಿ ಹೋಗಿದ್ದಾರೆ. ಹೀಗಾಗಿ ನಮಗೆ ಯಾವ ಗ್ಯಾರಂಟಿ ಯೋಜನೆಗಳೂ ಬೇಡ, ಬೆಲೆ ಏರಿಕೆ ನಿಲ್ಲಿಸಿ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿಯೇ ಶಾಸಕರ ಅನುದಾನಕ್ಕೆ ಕತ್ತರಿ ಬಿದ್ದಿದೆ ಎನ್ನಲಾಗುತ್ತಿದೆ. ಗೃಹಲಕ್ಷ್ಮಿಮತ್ತು ಅನ್ನಭಾಗ್ಯ ಯೋಜನೆಯ ಹಣ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ಆಡಳಿತ ಪಕ್ಷದ ನಾಯಕರಲ್ಲಿಯೇ ಭಾರೀ ಅಸಮಾಧಾನವಿದೆ. ಇದರ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ಸದ್ದು ಮಡುತ್ತಿದೆ.
ಹೌದು, ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ಸಿಗುವಂತಾಗಬೇಕು ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಮಾತನಾಡಿದ ಅವರು, ʼಗ್ಯಾರಂಟಿ ಯೋಜನೆಗಳು ಕೇವಲ ಬಡವರಿಗೆ ಮಾತ್ರ ಸಿಗಬೇಕು. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲಿಸಲು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದುʼ ಎಂದಿದ್ದಾರೆ.
ಕೆಡಿಪಿ ಸಭೆಯಲ್ಲಿ ಮಾತನಾಡಿದ್ದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ʼ2 ಲಕ್ಷ ರೂ. ಸಂಬಳ ಪಡೆಯುವ ಮಹಿಳೆಯರು ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಮ್ಮದು ಅಷ್ಟೊಂದು ಶ್ರೀಮಂತರ ರಾಜ್ಯವೇʼ ಅಂತಾ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪರಮೇಶ್ವರ್, ʼಇದು ಗಂಭೀರ ವಿಚಾರವಾಗಿದೆ. ಶ್ರೀಮಂತರು ಪಡೆದುಕೊಳ್ಳುತ್ತಿರುವ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ತಪ್ಪಿಸಬೇಕಿದೆ. ಬಿಪಿಎಲ್ ಮಾನದಂಡ ಇಟ್ಟುಕೊಂಡು ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗುವಂತೆ ಮಾಡಬೇಕಿದೆ. ಈ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಏಕೆ ಕಳುಹಿಸಬಾರದುʼ ಎಂದು ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಟೀಕಿಸಿದ್ದ ಬಿಜೆಪಿ, ʼಸಿಎಂ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ಕಾಕಾ ಪಾಟೀಲ್ಗೂ ಫ್ರೀ ಮಹಾದೇವಪ್ಪ ನಿಂಗೂ ಫ್ರೀ ಎಂದು ಪುಂಗಿ ಊದಿ ರಾಜ್ಯದ ಜನರ ಕಿವಿ ಮೇಲೆ ಕಂಡೀಷನ್ ಅಪ್ಲೈ ಎನ್ನುವ ಹೂವನ್ನು ಲೀಲಾಜಾಲವಾಗಿ ಇಟ್ಟಿದ್ದಾರೆʼ ಎಂದು ಕುಟುಕಿತ್ತು.
Source,: Zee News ಕನ್ನಡ







