ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು “ಮನಸ್ವಿನಿ” ಯೋಜನೆಯನ್ನು ಜಾರಿಗೆ ತಂದಿದೆ. ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಪ್ರತಿ ತಿಂಗಳು ರೂ.500 ಮಾಸಾಶನ ನೀಡುವ ಈ ಯೋಜನೆಯನ್ನು ಸರ್ಕಾರವು 2013-14ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿ, ದಿನಾಂಕ 01-08-2013ರಿಂದ ಅನುಷ್ಟಾನಕ್ಕೆ ತಂದಿದೆ.
65 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರವು ಕೆಳಕಂಡಂತೆ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 94 ಡಿಎಸ್ಪಿ 2013
ದಿನಾಂಕ: 01-08-2013
ಸ್ಥಳ: ಬೆಂಗಳೂರು
ಯೋಜನೆಯ ಮುಖ್ಯ ಅಂಶಗಳು:
1. ಆದಾಯ ಮಿತಿ:
ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ರೂ.12,000 ಕ್ಕಿಂತ ಕಡಿಮೆ ಇರಬೇಕು.
ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ರೂ.17,000 ಕ್ಕಿಂತ ಕಡಿಮೆ ಇರಬೇಕು.
2. ಇತರೆ ಪಿಂಚಣಿ ನಿರ್ಬಂಧ:
ಫಲಾನುಭವಿಗಳು ಯಾವುದೇ ಇತರೆ ಸಾಮಾಜಿಕ ಭದ್ರತಾ ಯೋಜನೆಗಳಡಿ ಅಥವಾ ಸಾರ್ವಜನಿಕ/ಖಾಸಗಿ ಮೂಲಗಳಿಂದ ಯಾವುದೇ ಪಿಂಚಣಿ ಅಥವಾ ಸಹಾಯಧನ ಪಡೆಯುತ್ತಿರಬಾರದು.
3. ಮಂಜೂರಾತಿ ಪ್ರಾಧಿಕಾರ:
ಸಂಬಂಧಿಸಿದ ಹೋಬಳಿಯ ಉಪ ತಹಸೀಲ್ದಾರರು ಅಥವಾ ತಾಲ್ಲೂಕು ತಹಸೀಲ್ದಾರರು ಅರ್ಹ ಫಲಾನುಭವಿಗಳಿಗೆ ಮಾಸಾಶನ ಮಂಜೂರು ಮಾಡುತ್ತಾರೆ.
4. ಹಣ ವರ್ಗಾವಣೆ ವಿಧಾನ:
ಮಾಸಾಶನವನ್ನು ಫಲಾನುಭವಿಯ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆಗೆ ಖಜಾನೆಯಿಂದ ಪ್ರತಿ ತಿಂಗಳು ನೇರವಾಗಿ ವರ್ಗಾಯಿಸಲಾಗುತ್ತದೆ.
5. ವೆಚ್ಚ ಭರಿಸುವಿಕೆ:
ಈ ಯೋಜನೆಗೆ ಸಂಬಂಧಿಸಿದ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2235-60-102-1-01 ಅಡಿಯಲ್ಲಿ ಒದಗಿಸಲಾದ ಅನುದಾನದಿಂದ ಭರಿಸಲಾಗುತ್ತದೆ.
6. ಮಾಸಾಶನ ರದ್ದುಪಡಿಸುವ ಸಂದರ್ಭಗಳು:
ಫಲಾನುಭವಿಯ ವಿವಾಹ ಅಥವಾ ಮರುವಿವಾಹವಾದಲ್ಲಿ
ಉದ್ಯೋಗ ಪಡೆದು ನಿಗದಿತ ಆದಾಯ ಮಿತಿಯನ್ನು ಮೀರಿದಲ್ಲಿ
ಫಲಾನುಭವಿಯ ಮರಣ ಸಂಭವಿಸಿದಲ್ಲಿ
ಈ ಸಂದರ್ಭಗಳಲ್ಲಿ ಮಾಸಾಶನವನ್ನು ರದ್ದುಪಡಿಸಲಾಗುತ್ತದೆ.
7. ಇತರೆ ನಿಯಮಗಳು:
ಯೋಜನೆಯ ಸಂಪೂರ್ಣ ರೂಪುರೇಷೆಗಳು, ಅರ್ಜಿ ನಮೂನೆ ಹಾಗೂ ಮಂಜೂರಾತಿ ಪ್ರಕ್ರಿಯೆಯನ್ನು ಸರ್ಕಾರವು ಪ್ರತ್ಯೇಕವಾಗಿ ನಿಗದಿಪಡಿಸಿದೆ.








